By Village Missionary Movement
Friday, 15-Sep-2023ಧೈನಂದಿನ ಧ್ಯಾನ(Kannada) – 15.09.2023
ಎಲ್ಲಾ ಒಳ್ಳೆಯದಕ್ಕೇ
"...ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ” - ರೋಮಾ 8:28
ಡೋಣಾವೂರ್ ನಿಲಯದ ತಾಯಾಗಿದ್ದು, ಅನೇಕ ಅನಾಥ ಮಕ್ಕಳಿಗೆ ಆಸರೆಯಾಗಿದ್ದ ಶ್ರೀಮತಿ ಏಮಿ ಕಾರ್ಮೈಕಲ್ ಅಮ್ಮನವರನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಅವರು ಚಿಕ್ಕ ಮಗುವಾಗಿದ್ದಾಗ ಅವರ ಚಿಂತೆ ಏನು ಗೊತ್ತಾ? ಸಾಮಾನ್ಯವಾಗಿ ಅವರು ಹುಟ್ಟಿದ ದೇಶದ ಜನರ ಕಣ್ಣುಗಳೆಲ್ಲಾ ನೀಲಿ ಬಣ್ಣದಲ್ಲಿದ್ದವು, ಏಮಿಯ ಕಣ್ಣುಗಳು ಮಾತ್ರ ಕಪ್ಪಾಗಿದ್ದವು. ಅದೇ ಅವರ ಚಿಂತೆಗೆ ಕಾರಣ. ಆದ್ದರಿಂದ ರಾತ್ರಿ ಮಲಗುವ ಮುನ್ನ ಅವರು ತನ್ನ ಹಾಸಿಗೆಯ ಪಕ್ಕದಲ್ಲಿ ಮೊಣಕಾಲೂರಿ, "ಯೇಸಪ್ಪಾ! ನಾನು ಬೆಳಿಗ್ಗೆ ಎದ್ದೇಳುವಾಗ ದಯವಿಟ್ಟು ನನ್ನ ಕಣ್ಣುಗಳನ್ನು ಸಹ ನೀಲಿ ಬಣ್ಣಕ್ಕೆ ತಿರುಗಿಸಿ ಪ್ಲೀಸ್" ಎಂದು ಬಹಳ ದೃಢವಾಗಿ ಪ್ರಾರ್ಥಿಸಿ ಹಾಸಿಗೆಗೆ ಹೋದರು. ಬೆಳಿಗ್ಗೆ ಎದ್ದ ಕೂಡಲೇ ವೇಗವಾಗಿ ಕನ್ನಡಿಯ ಬಳಿಗೆ ಹೋಗಿ ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದು ನೋಡಿದರು. ಕಣ್ಣುಗುಡ್ಡೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಪ್ಪು ಬಣ್ಣದಲ್ಲಿ ಕಾಣಿಸಿತು. "ಹಾಗಾದರೆ ಯೇಸಪ್ಪ ನನ್ನ ಪ್ರಾರ್ಥನೆಯನ್ನು ಕೇಳಲಿಲ್ಲವೇ?" ಎಂದು ಅಂತರಾತ್ಮವು ಕೇಳಲು, ಪುಟ್ಟ ಕಣ್ಣುಗಳಲ್ಲಿ ಕಣ್ಣೀರು ಸುರಿಯಿತು.
ಹಲವು ವರ್ಷಗಳು ಕಳೆದವು. ಕರ್ತನು ಏಮಿಯವರನ್ನು ಸೇವೆಗೆ ಕರೆದರು. ಅವರು ಸಹ ತನ್ನನ್ನು ಸಮರ್ಪಿಸಿಕೊಂಡು ನಾನು ಹೋಗಬೇಕಾದ ಸ್ಥಳವನ್ನು ತೋರಿಸಿ, ಎಂದು ದೇವರ ನಡೆಸುವಿಕೆಗಾಗಿ ಕಾದಿದ್ದಾಗ, ದೇವರು ಭಾರತವನ್ನು ತೋರಿಸಿದರು. ದೇವರ ಮಾತಿಗೆ ವಿಧೇಯರಾಗಿ ಭಾರತಕ್ಕೆ ಬಂದು ನಮ್ಮ ತಮಿಳುನಾಡಿನ ಡೋಣಾವೂರಿನಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಆಗ ಅವರಿಗೆ ಅರ್ಥವಾಯಿತು, ಭಾರತೀಯರ ಕಣ್ಣುಗಳಂತೆ ನನ್ನ ಕಣ್ಣುಗಳೂ ಕಪ್ಪಾಗಿದೆ ಎಂದು. ನಾನು ಭಾರತೀಯರೊಂದಿಗೆ ಇರುವುದೇ ದೇವರ ಚಿತ್ತ ಎಂದು ಏಮಿ ಅರ್ಥಮಾಡಿಕೊಂಡರು. ಬಾಲ್ಯದಲ್ಲಿ ಅವರಿಗೆ ಅದು ಕಷ್ಟವಾಗಿದ್ದರೂ ದೇವರು ಎಲ್ಲವನ್ನು ಒಳ್ಳೆಯದಕ್ಕಾಗಿಯೇ ಮಾಡಿದ್ದಾರೆ ಎಂಬುದನ್ನು ಅರಿತು ದೇವರನ್ನು ಸ್ತುತಿಸಿದರು.
ಇಂದು ನಾವೂ ಕೂಡ ನನ್ನ ಜೀವನದಲ್ಲಿರುವ ಈ ಕಷ್ಟ ನನ್ನಿಂದ ದೂರವಾಗಲಿ ಎಂದು ಅಳುತ್ತೇವೆ. ದೇವರು ನನಗೆ ಮಾತ್ರ ಏಕೆ ಇದನ್ನು ಅನುಮತಿಸಬೇಕು ಎಂದು ಅನೇಕ ಪ್ರಶ್ನೆಗಳೊಂದಿಗೆ ಬದುಕುತ್ತೇವೆ. ಆದರೆ ನಾವೇನು ಮಾಡಬೇಕು ಗೊತ್ತಾ? ದೇವರ ಪಾದದಲ್ಲಿ ಕುಳಿತು ದೇವರೇ ನಿನ್ನ ಚಿತ್ತವನ್ನು ಮಾಡಲು ನನ್ನನ್ನು ಒಪ್ಪಿಸಿಕೊಡುತ್ತೇನೆ ಎಂದು ಸಮರ್ಪಿಸಿಕೊಡುವುದು ಮಾತ್ರವೇ. ಇಂದು ಓದಿದ ಸತ್ಯವೇದ ಭಾಗದಲ್ಲಿ, ಹುಟ್ಟು ಕುರುಡನೊಬ್ಬನನ್ನು ನೋಡಿ ಇವನ ಈ ಸ್ಥಿತಿಗೆ ಯಾರು ಕಾರಣ, ಯಾರು ಮಾಡಿದ ಅಪರಾಧ ಎಂದು ಶಿಷ್ಯರು ಕೇಳುತ್ತಾರೆ. ಯೇಸುಕ್ರಿಸ್ತನು "ಇದು ಇವನು ಮಾಡಿದ ಅಪರಾಧವಲ್ಲ, ಇವನ ಹೆತ್ತವರು ಮಾಡಿದ ಅಪರಾಧವೂ ಅಲ್ಲ, ನನ್ನ ಕ್ರಿಯೆಯು ಬಹಿರಂಗಗೊಳ್ಳಲು ನಾನೇ ಇದನ್ನು ಅವನ ಜೀವನದಲ್ಲಿ ಅನುಮತಿಸಿದ್ದೇನೆ" ಎನ್ನುತ್ತಾರೆ. ಹೌದು, ನಾವು ಹುಟ್ಟುವ ಮೊದಲೇ, ನಾವು ಏನು ಮಾಡಲಿದ್ದೇವೆ ಎಂಬುದನ್ನು ದೇವರು ಸೂಚಿಸಿದ್ದಾರೆ. ಅದಕ್ಕಾಗಿಯೇ ಅವರು ನಮ್ಮ ಜೀವನದಲ್ಲಿ ಪ್ರತಿಯೊಂದು ಕಾರ್ಯವನ್ನೂ ಅನುಮತಿಸುತ್ತಾರೆ. ನಾವು ಅವರಿಗಾಗಿ ಉಪಯೋಗವಾಗಲು ನಮ್ಮನ್ನು ಸಮರ್ಪಿಸಿಕೊಳ್ಳುವಾಗ ನಮ್ಮ ಮೂಲಕ ಅನೇಕರನ್ನು ತನ್ನ ರಾಜ್ಯಕ್ಕೆ ಮುನ್ನಡೆಸುತ್ತಾರೆ. ಆಮೆನ್!
- Mrs. ತವಮಣಿ ವೈರವೇಲ್
ಪ್ರಾರ್ಥನಾ ಅಂಶ:
ಆಮೆನ್ ವಿಲೇಜ್ ಟಿವಿ ಚಾನೆಲ್ ಅನ್ನು ಸ್ಯಾಟಲೈಟ್ ಚಾನೆಲ್ ಆಗಿ ಪರಿವರ್ತಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482