By Village Missionary Movement
Tuesday, 14-Mar-2023ಧೈನಂದಿನ ಧ್ಯಾನ(Kannada) – 14.03.2023
ಯೇಸುವಿನ ಬಾಸುಂಡೆಗಳಿಂದ ಗುಣವಾಯಿತು.
"ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು;... ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು” - ಯೆಶಾಯ 53:5
ಒಂದು ಈಸ್ಟರ್ ಭಾನುವಾರದಂದು ಬೋಧಕರೊಬ್ಬರು ಒಂದು ಹಳೆಯ ಗಿಳಿ ಪಂಜರವನ್ನು ಆಲಯಕ್ಕೆ ತಂದು ಪ್ರಸಂಗವೇದಿಕೆಯ ಮೇಲೆ ಇಟ್ಟರು. ಆಲಯದಲ್ಲಿದ್ದ ಎಲ್ಲಾ ಸಭೆಮಕ್ಕಳ ಕಣ್ಣುಗಳು ಪ್ರಶ್ನಾರ್ಥಕವಾಗಿ ನೋಡುತ್ತಿದ್ದವು. ಅದನ್ನು ನೋಡಿದ ಸೇವಕರು ಮಾತನಾಡತೊಡಗಿದರು, “ನಾನು ಆಲಯಕ್ಕೆ ಬರುವಾಗ ಒಬ್ಬ ಚಿಕ್ಕಹುಡುಗ ಈ ಗಿಳಿ ಪಂಜರವನ್ನು ಕೈಯಲ್ಲಿ ಹಿಡಿದುಕೊಂಡು ಬಂದನು. ಆ ಪಂಜರದ ಒಳಗೆ ಮೂರು ಗಿಳಿಗಳು ಭಯದಿಂದ ನಡುಗುತ್ತಿರುವುದನ್ನು ನೋಡಿದೆ. ಆ ಹುಡುಗನ ಬಳಿ ಅದರಲ್ಲಿ ಏನಿದೆ ಕೇಳಿದಾಗ, "ಅದು ವಯಸ್ಸಾದ ಮೂರು ಗಿಳಿಗಳು" ಎಂದು ಉತ್ತರಿಸಿದನು. ಇದನ್ನು ಇಟ್ಟುಕೊಂಡು ಏನು ಮಾಡುತ್ತೀಯ ಎಂದು ಕೇಳಿದಾಗ, ಅವನು ಮುಗುಳ್ನಕ್ಕು, “ನಾನು ಇವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಆಟವಾಡುತ್ತೇನೆ. ಅವುಗಳ ಎಲ್ಲಾ ಗರಿಗಳನ್ನು ಕಿತ್ತು ಅವುಗಳಿಗೆ ಕೋಪ ಹುಟ್ಟಿಸಿ ಒಂದಕ್ಕೊಂದು ಜಗಳವಾಡುವಂತೆ ಮಾಡಿ ಸಂತೋಷಪಡುತ್ತೇನೆ. ಕೊನೆಗೆ ನಾನು ಸಾಕುತ್ತಿರುವ ಬೆಕ್ಕಿಗೆ ಅವುಗಳನ್ನು ಆಹಾರವಾಗಿ ನೀಡುತ್ತೇನೆ” ಎಂದು ಹೇಳಿದನು. "ಮಗನೇ, ನೀನು ಇವುಗಳನ್ನು ನನಗೆ ಮಾರುತ್ತೀಯಾ?" ಎಂದು ಕೇಳಿದೆ. ಅದಕ್ಕೆ ಅವನು, “ಅಯ್ಯಾ, ಇವು ಸಾಮಾನ್ಯ ಗಿಳಿಗಳು. ಇವು ಹಾಡುವುದಿಲ್ಲ, ಅಷ್ಟೇನೂ ಸುಂದರವಾಗಿಯೂ ಇಲ್ಲ" ಎಂದನು. ಅದಕ್ಕೆ ನಾನು ಅವನಿಗೆ, "ನನಗೆ ಬೆಲೆ ಮಾತ್ರ ಹೇಳು" ಅಂದೆನು. "100 ರೂ" ಎಂದನು. ನಾನು ಪಂಜರದೊಂದಿಗೆ ನಿಧಾನವಾಗಿ ನಡೆದೆ. ಆ ಹುಡುಗನೋ ಹಣದೊಂದಿಗೆ ಹಾರಿಹೋದನು. ನಾನು ಆಲಯದ ಬಳಿಯಿರುವ ಮರದ ಹತ್ತಿರ ಹಕ್ಕಿಗಳನ್ನು ಸ್ವತಂತ್ರವಾಗಿ ಹಾರಾಡುವಂತೆ ಬಿಟ್ಟು ಬಿಟ್ಟೆ” ಎಂದು ಹೇಳುತ್ತಾ ಉಪದೇಶವನ್ನು ಮುಂದುವರಿಸಿದರು.
ಒಂದು ದಿನ ಏದೆನ್ ತೋಟದಿಂದ ಬಂದ ಸೈತಾನನು ಮತ್ತು ಯೇಸು ಮಾತನಾಡುತ್ತಿದ್ದರು. “ಯೇಸುವೆ ನಾನು ಇಡೀ ಜಗತ್ತನ್ನು ನನ್ನ ಆಳ್ವಿಕೆಯಲ್ಲಿ ತಂದಿದ್ದೇನೆ. ಒಬ್ಬರೂ ನನ್ನನ್ನು ವಿರೋಧಿಸಲಿಲ್ಲ. ವಯೋಮಿತಿಯಿಲ್ಲದೆ ಎಲ್ಲರನ್ನೂ ಹಿಡಿದೆ" ಎಂದು ಸೊಕ್ಕಿನಿಂದಲೇ ಹೇಳಿದ! ಯೇಸು ಶಾಂತವಾದ ಧ್ವನಿಯಲ್ಲಿ, "ನೀನು ಅವರನ್ನಿಟ್ಟುಕೊಂಡು ಏನು ಮಾಡುತ್ತೀಯ?" ಎಂದು ಕೇಳಿದರು. “ಓಹ್! ಅದಾ, ನಾನು ಅವರಿಗೆ ಹೇಗೆ ಜಗಳವಾಡಬೇಕು, ಹೇಗೆ ಕುಡಿಯಬೇಕು ಮತ್ತು ಹೇಗೆ ಧೂಮಪಾನ ಮಾಡಬೇಕು ಎಂದೆಲ್ಲಾ ಕಲಿಸುತ್ತೇನೆ. ಅಷ್ಟೇ ಅಲ್ಲ, ಗುಂಡುಗಳನ್ನು ಹೇಗೆ ತಯಾರಿಸಬೇಕು ಮತ್ತು ಒಬ್ಬರನ್ನೊಬ್ಬರು ಕೊಲ್ಲುವುದು ಹೇಗೆ ಎಂದು ನಾನು ಅವರಿಗೆ ಕಲಿಸುತ್ತೇನೆ" ಎಂದನು. ಯೇಸು ದುಃಖದಿಂದ ಅವನನ್ನು ನೋಡಿ, "ಆಮೇಲೆ?" ಎಂದರು. ಸೈತಾನನು, "ನಾನು ಅವರನ್ನು ಆತ್ಮಹತ್ಯೆಗೆ ಕರೆದೊಯ್ಯುತ್ತೇನೆ ಮತ್ತು ಕೊಲ್ಲುತ್ತೇನೆ" ಎಂದು ಹೇಳಿದನು. "ನಾನು ನಿನಗೆ ಕ್ರಯಧನವಾಗಿ ಏನನ್ನು ಕೊಟ್ಟರೆ ಇವರನ್ನು ನನಗೆ ಕೊಡುತ್ತೀಯ" ಎಂದು ಯೇಸು ಕೇಳಿದರು. ಅದಕ್ಕೆ ಸೈತಾನನು “ಅಯ್ಯಾ, ಇವರು ನಿಮಗೆ ಬೇಡ. ಇವರು ಒಳ್ಳೆಯವರಲ್ಲ. ಇವರು ನಿಮ್ಮ ಮುಖಕ್ಕೆ ಉಗುಳುತ್ತಾರೆ, ನಿಮ್ಮನ್ನು ಶಪಿಸುತ್ತಾರೆ, ನಿಮ್ಮನ್ನು ಗಾಯಪಡಿಸಿ ಶಿಲುಬೆಗೇರಿಸಿ ಕೊಂದು ಹಾಕುತ್ತಾರೆ” ಎಂದು ಉಸಿರುಬಿಡದೇ ಹೇಳಿದನು. ಇದ್ಯಾವುದಕ್ಕೂ ಯೇಸು ಕಿವಿಗೊಡದೆ ಸೈತಾನನನ್ನು ನೋಡಿ, "ನಿನಗೆ ಎಷ್ಟು ಬೇಕು ಅದು ಮಾತ್ರ ಹೇಳು" ಎಂದರು. ಸೈತಾನನು ಯೇಸುವನ್ನು ಅಪಹಾಸ್ಯದಿಂದ ನೋಡುತ್ತಾ, “ಅಯ್ಯಾ, ಕ್ರಯಧನವಾಗಿ ನಿನ್ನ ಪೂರ್ತಿ ಕಣ್ಣೀರನ್ನು ಮತ್ತು ನಿನ್ನ ದೇಹದಲ್ಲಿರುವ ಎಲ್ಲಾ ರಕ್ತವನ್ನು ಕೊಟ್ಟು ಬಿಡು" ಎಂದು ಕೇಳಿದನು.
ಬೋಧಕರು ಆ ಪಂಜರದ ಬಾಗಿಲುಗಳನ್ನು ತೆರೆದು ಖಾಲಿ ಪಂಜರವನ್ನು ಸಭೆಯವರಿಗೆ ತೋರಿಸಿ ಪ್ರಾರ್ಥಿಸಲು ಪ್ರಾರಂಭಿಸಿದರು. ಹೌದು, ದೇವರು ಶಿಲುಬೆಯಲ್ಲಿ ಸುರಿಸಿದ ರಕ್ತವನ್ನು ಕ್ರಯವಾಗಿ ಕೊಟ್ಟು ನಮ್ಮನ್ನು ತೆಗೆದುಕೊಂಡಿದ್ದಾರೆ. ಸೈತಾನನ ಹಿಡಿತದಿಂದ ನಮ್ಮನ್ನು ಬಿಡಿಸಿದ್ದಾರೆ ನಾವು ಅದನ್ನು ಎಂದಾದರೂ ಯೋಚಿಸಿದ್ದೇವಾ?
- Bro. ಭಾಗ್ಯನಾಥನ್
ಪ್ರಾರ್ಥನಾ ಅಂಶ:
ಗ್ರಾಮೀಣ ಟಿವಿ ಚಾನೆಲ್ನ ಅಗತ್ಯತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482