By Village Missionary Movement
Tuesday, 15-Nov-2022ಧೈನಂದಿನ ಧ್ಯಾನ(Kannada) – 16.11.2022
ಆಶೀರ್ವಾದಕರವಾದ ಜೀವನಕ್ಕೆ
"...ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ?..." -1 ಸಮುವೇಲ 15:22
ವಿಧೇಯತೆ ಎಂಬುದು ಕ್ರೈಸ್ತ ಜೀವನದಲ್ಲಿ ಅತ್ಯಂತ ಪ್ರಮುಖ ವಿಷಯವಾಗಿದೆ. ದೇವರ ವಾಕ್ಯಕ್ಕೆ ವಿಧೇಯರಾದ ಜನರು ತಮ್ಮ ಸಂತತಿಗೆ ಆಶೀರ್ವಾದಕರವಾಗಿ ಜೀವಿಸಿದ್ದನ್ನು, ಅವಿಧೇಯರಾದವರು ತಮಗಷ್ಟೇ ಅಲ್ಲ ತಮ್ಮ ಸಂತತಿಗೂ ಶಾಪವಾಗಿ ಮಾರ್ಪಟ್ಟಿದ್ದನ್ನು ಸತ್ಯವೇದದಲ್ಲಿ ಕಾಣಬಹುದು. ಉದಾಹರಣೆಗೆ, ಅಬ್ರಹಾಮನ ವಿಧೇಯತೆಯಿಂದಾಗಿ, ಅವನ ವಂಶಸ್ಥರು ಭೂಮಿಯ ರಾಜವಂಶಗಳ ನಡುವೆ ಇಂದಿನವರೆಗೂ ಆಶೀರ್ವದಿಸಲ್ಪಟ್ಟಿರುವುದನ್ನು ನಾವು ನೋಡುತ್ತೇವೆ. ಆಕಾನನ ಅವಿಧೇಯತೆಯಿಂದಾಗಿ ಅವನಲ್ಲಿರುವ ಎಲ್ಲವನ್ನೂ ಬೆಂಕಿಗೆ ಹಾಕಲಾಯಿತು ಎಂದು ಓದುತ್ತೇವೆ. ಇಂದು ಅರಸನಾದ ಸೌಲನ ಅವಿಧೇಯತೆಯಿಂದಾಗಿ ಸಂಭವಿಸಿದ ವಿಷಯಗಳನ್ನು ನೋಡೋಣ.
ಕರ್ತನು, ಪ್ರವಾದಿಯಾದ ಸಮುವೇಲನ ಮೂಲಕ, ಅಮಾಲೇಕ್ಯರಿಗೆ ಸೇರಿದ ಎಲ್ಲವನ್ನೂ ನಾಶಮಾಡಲು ಅರಸನಾದ ಸೌಲನಿಗೆ ಹೇಳುತ್ತಾರೆ. ಏಕೆಂದರೆ ಇಸ್ರಾಯೇಲ್ಯರು ಐಗುಪ್ತದಿಂದ ಹೊರಬಂದಾಗ ಅಮಾಲೇಕ್ಯರು ಅವರಿಗೆ ಮಾಡಿದ ಎಲ್ಲಾ ಕಾರ್ಯಗಳನ್ನು ಮನದಲ್ಲಿಟ್ಟುಕೊಂಡಿದ್ದೇನೆ. ಆದ್ದರಿಂದಲೇ ಅವರನ್ನು ನಾಶಮಾಡಿಬಿಡು ಎಂದು ಹೇಳಿದರು. ಆದರೆ ಸೌಲನು ಕರ್ತನ ಮಾತಿಗೆ ವಿಧೇಯನಾಗದೇ, ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತವಾಗಿ ಉಳಿಸಿದನು, ಕೊಬ್ಬಿದ ಪಶುಗಳನ್ನೂ ಉಳಿಸಿದನು. ಕ್ಷುಲ್ಲಕ ಕಾರ್ಯಕ್ಕಾಗಿ ದೇವರ ಮಾತಿಗೆ ಅವಿಧೇಯನಾದ ಸೌಲನನ್ನು ಅರಸನಾಗಿ ಮಾಡಿದ್ದು ದೇವರಿಗೆ ಬಹಳ ಬೇಸರವನ್ನುಂಟು ಮಾಡಿತು. ಹೌದು, ಸೌಲನ ಸಣ್ಣ ಅವಿಧೇಯತೆಯು ರಾಜಪದವಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಇಂದು ಕುಟುಂಬ, ಕೆಲಸದ ಸ್ಥಳ, ಸಮುದಾಯ ಮತ್ತು ಸಭೆಯಲ್ಲಿ ಸೌಲನಂತೆ ಕರ್ತನು ನಮ್ಮನ್ನು ಮೇಲಕ್ಕೆತ್ತಿ ಹೆಚ್ಚಿಸಿರಬಹುದು. ಆದರೆ ಅನೇಕ ಸಮಯಗಳಲ್ಲಿ, ಈ ಉನ್ನತಿಯು ದೇವರಿಂದ ಬಂದದ್ದು ಎಂಬುದನ್ನು ಗ್ರಹಿಸದೇ, ಜನರನ್ನು ಮೆಚ್ಚಿಸಲು ದೇವರ ಮಾತನ್ನು ಹಿಂದಕ್ಕೆ ತಳ್ಳಿ ನಮ್ಮ ಹೃದಯ ಬಯಸಿದ್ದನ್ನು ಮಾಡುತ್ತಿದ್ದೇವೆಯೇ? ಅದರ ಬಗ್ಗೆ ಯೋಚಿಸೋಣ. ಅವಿಧೇಯತೆಯು ಶ್ರೇಷ್ಠತೆಯನ್ನು ಕಳೆದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. "ನಾನು ಯಾರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ, ಮನುಷ್ಯರನ್ನಾ ಅಥವಾ ದೇವರನ್ನಾ?" ಎಂಬ ಪ್ರಶ್ನೆಯನ್ನು ನಮ್ಮನ್ನು ನಾವೇ ಕೇಳಿಕೊಂಡು ದೇವರ ವಾಕ್ಯಕ್ಕೆ ಮೊದಲ ಸ್ಥಾನವನ್ನು ನೀಡಲು ನಿರ್ಧರಿಸೋಣ.
ಅದೇ ಸಮಯದಲ್ಲಿ ನಾವು ಯೇಸು ಕ್ರಿಸ್ತನ ವಿಧೇಯತೆಯ ಬಗ್ಗೆ ಯೋಚಿಸಿ ನೋಡಲೇಬೇಕು. "ಆತನು ದೇವಸ್ವರೂಪನಾಗಿದ್ದರೂ,... ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು" (ಫಿಲಿಪ್ಪಿ. 2:6-8). ಹೌದು, ತ್ರಿಯೇಕದಲ್ಲಿ ಒಬ್ಬರಾದ ಯೇಸು ಕ್ರಿಸ್ತನಿಗೇ ವಿಧೇಯತೆ ಅಷ್ಟೊಂದು ಅಗತ್ಯವಾಗಿರುವಾಗ ನಮಗೆ ಇನ್ನೆಷ್ಟರ ಮಟ್ಟಿಗೆ ಅಗತ್ಯವಾಗಿದೆ! ಹೌದು, ಪ್ರಿಯರೇ! ವಿಧೇಯತೆ ನಮಗಷ್ಟೇ ಅಲ್ಲ, ನಮ್ಮ ಸಂತತಿಗೂ ವರವೆಂಬುದನ್ನು ಮರೆಯಬಾರದು. ಯೋನನ ಅವಿಧೇಯತೆಯು ಸಮುದ್ರದ ಅಲ್ಲೋಲಕಲ್ಲೋಲಕ್ಕೆ ಕಾರಣವಾಯಿತು. ತಪ್ಪು ಮಾಡಿದವನು ನಾನೇ ಎಂದು ಯೋನನು ಒಪ್ಪಿಕೊಂಡಂತೆ ನಮ್ಮನ್ನು ದೇವರ ಸಮ್ಮುಖದಲ್ಲಿ ತಗ್ಗಿಸಿಕೊಳ್ಳುವಾಗ ನಿಮ್ಮ ಜೀವನವು ಆಶೀರ್ವಾದಕರವಾಗಿರುತ್ತದೆ.
- Mrs. ನಿರೋಶಾ ಆಲ್ವಿನ್
ಪ್ರಾರ್ಥನಾ ಅಂಶ:
7000 ಮನೆ ಪ್ರಾರ್ಥನಾ ಗುಂಪುಗಳನ್ನು ದೇವರು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482