By Village Missionary Movement
Wednesday, 29-Jun-2022ಧೈನಂದಿನ ಧ್ಯಾನ(Kannada) – 30.06.2022
ಎಲೀಯನ ದೇವರು
"ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ." - ಕೀರ್ತನೆ 121:1
ಇಸ್ರಾಯೇಲಿನ ಅರಸನಾದ ಅಹಾಬನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಸಮಾರ್ಯದಲ್ಲಿ ಬಾಳನಿಗೆ ದೇವಾಲಯ ಮತ್ತು ಬಲಿಪೀಠವನ್ನು ನಿರ್ಮಿಸಿ ಕರ್ತನಿಗೆ ಕೋಪವನ್ನು ಉಂಟುಮಾಡಿದನು. ಆಗ ಕರ್ತನು, ಎಲೀಯ ಪ್ರವಾದಿಯ ಮೂಲಕ ದೇಶದಲ್ಲಿ ಬರಲಿರುವ ಬರಗಾಲದ ಬಗ್ಗೆ ಅಹಾಬನ ಬಳಿ ಹೇಳಿದ ನಂತರ, ಎಲೀಯನನ್ನು ಕೆರೀತ್ಹಳ್ಳದಲ್ಲಿ ಅಡಗಿಕೊಳ್ಳುವಂತೆ ಹೇಳಿದರು.
ನದಿಯ ಬಳಿಯಲ್ಲಿ ಅಡಗಿಕೊಂಡಿದ್ದ ಎಲೀಯನ ಸ್ಥಿತಿ ಏನೆಂಬುದನ್ನು ಸ್ವಲ್ಪ ಯೋಚಿಸಿ ನೋಡೋಣ. ಮನುಷ್ಯರ ಓಡಾಟ ಇಲ್ಲ. ಕುಡಿಯುವ ನೀರು ಹೊರತುಪಡಿಸಿ ಬೇರೆ ಪಾನೀಯಗಳು ಅಂದರೆ ದ್ರಾಕ್ಷಿ ರಸವೂ ಇರಲಿಲ್ಲ. ಹಾಸಿಗೆ ಇಲ್ಲ, ಹೊದಿಕೆ ಇಲ್ಲ. ಹೊಟ್ಟೆ ಹಸಿದಾಗ ತಿನ್ನಲು ಸಾಧ್ಯವಿಲ್ಲ. ಯಾವಾಗ ಕಾಗೆ ಬರುತ್ತದೆ ಎಂದು ಆಕಾಶವನ್ನೇ ದೃಷ್ಟಿಸಿ ನೋಡುತ್ತಾ ಕಾಯುತ್ತಾ ಇದ್ದಿರಬಹುದು. ಆ ಕಾಗೆಗೆ ಆಹಾರ ಸಿಕ್ಕಿತೋ ಇಲ್ಲವೋ, ಆದರೆ ಎಲೀಯನಿಗೆ ರೊಟ್ಟಿ ಮತ್ತು ಮಾಂಸವನ್ನು ತರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಒಪ್ಪಿಕೊಂಡು ಉತ್ತಮವಾಗಿ ಮಾಡಿ ಮುಗಿಸಿತು. ಯಾರೂ ಪ್ರವೇಶಿಸಲಾಗದ ಸ್ಥಳದಲ್ಲಿ ಕಾರ್ಯ ನಿರ್ವಹಿಸಿ, ಎಲೀಯನನ್ನು ಪೋಷಿಸಿದ ದೇವರು ಎಷ್ಟು ಅದ್ಭುತ ಅಲ್ವಾ!
ಅದರಂತೆ ನೀವು ಸಹ ಯಾವುದೇ ಅನುಕೂಲಕರ ಪರಿಸ್ಥಿತಿಗಳಿಲ್ಲದೆ ಒಂಟಿಯಾಗಿ ಆದರಣೆಯಿಲ್ಲದೆ ಪರಿತಪಿಸುತ್ತಿದ್ದೀರಾ? ನಾನು ಮಕ್ಕಳನ್ನು ಹೇಗೆ ಬೆಳೆಸಲಿ? ಈ ತಿಂಗಳ ಮನೆ ಖರ್ಚಿಗೆ ಏನು ಮಾಡಲಿ? ಮದುವೆಯ ವಯಸ್ಸಿನ ಮಕ್ಕಳಿಗೆ ಕಾರ್ಯಗಳು ಕೈ ಕೂಡಿ ಬರಲು ಯಾರು ಸಹಾಯ ಮಾಡುತ್ತಾರೆ? ಕಾಯಿಲೆಗೆ ಚಿಕಿತ್ಸೆ ಮುಂದುವರಿಸಲು ಹಣದ ಅವಶ್ಯಕತೆ ಇದೆ ಎಂದೆಲ್ಲಾ ಚಿಂತಿಸುತ್ತಿದ್ದೀರಾ? ದೇವರನ್ನು ದೃಷ್ಟಿಸಿ ನೋಡಿರಿ. ಒಡಹುಟ್ಟಿದವರು, ಬಂಧು-ಮಿತ್ರರು ನಿಮಗೆ ಸಹಾಯ ಮಾಡುತ್ತಾರೆಂದು ನಿರೀಕ್ಷಿಸಬೇಡಿರಿ. ಅವರು ಕಾಗೆಗಳಂತೆ ನಮಗೆ ಸಹಾಯ ಮಾಡಬಹುದಲ್ಲಾ ಎಂದು ನಿರೀಕ್ಷಿಸಬೇಡಿರಿ. ಎಲೀಯನನ್ನು ಪೋಷಿಸಿದ್ದು ಕಾಗೆಗಳಲ್ಲ; ಕಾಗೆಗಳನ್ನು ಕಳುಹಿಸಿದ ದೇವರೇ ಅದನ್ನು ಮಾಡಿದರು.
ಪ್ರಿಯರೇ! ನಾವು ಇನ್ನೂ ನಮಗೆ ಸಹಾಯ ಮಾಡುವಂತಹ ಕಾಗೆಗಳನ್ನು ಹುಡುಕುತ್ತಿದ್ದೇವೆಯೇ ಅಥವಾ ಕಾಗೆಯನ್ನು ಕಳುಹಿಸಿದ ದೇವರನ್ನು ನಂಬುತ್ತಿದ್ದೇವೆಯೇ? ದೇವರು ಅಪ್ಪಣೆ ಕೊಡದ ಹೊರತು ಕಾಗೆ ಹಾರಿ ಬರುವುದಿಲ್ಲ. ಆದುದರಿಂದ ನಮಗೆ ಸಹಾಯ ಮಾಡುವ ದೇವರನ್ನೇ ದೃಷ್ಟಿಸಿ ನೋಡೋಣ. ನನ್ನ ಪತಿ ಮೆದುಳು ಜ್ವರದಿಂದ ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸೆಗೆ ಹಣದ ಅವಶ್ಯಕತೆ ಇತ್ತು. ಎಲ್ಲೂ ಸಹಾಯ ಸಿಗಲಿಲ್ಲ. ಆ ಕಷ್ಟಕರ ಪರಿಸ್ಥಿತಿಯಲ್ಲಿ ದೇವರು ಕಾಗೆಗಳಂತೆ ಮನುಷ್ಯರನ್ನು ಅನಿರೀಕ್ಷಿತ ರೀತಿಯಲ್ಲಿ ಕಳುಹಿಸಿ ಮತ್ತು ಎಲೀಯನ ಅಗತ್ಯಗಳನ್ನು ಪೂರೈಸಿದಂತೆಯೇ ನನ್ನ ಅವಶ್ಯಕತೆಗಳನ್ನೂ ಪೂರೈಸಿದರು. ಹೌದು ಅಂದು ಎಲೀಯನನ್ನು ಪೋಷಿಸಿದವರು, ನನ್ನನ್ನು ಮುನ್ನಡೆಸಿದವರು, ನಿಮ್ಮನ್ನೂ ಅದ್ಭುತವಾಗಿ ನಡೆಸುತ್ತಾರೆ. ಚಿಂತಿಸಬೇಡಿರಿ.
- Mrs. ಭುವನಾ ಧನಬಾಲನ್
ಪ್ರಾರ್ಥನಾ ಅಂಶ:
ಉತ್ತರ ರಾಜ್ಯಗಳಲ್ಲಿ ಹೊಸ ಕಾರ್ಯ ಕ್ಷೇತ್ರಗಳನ್ನು ಪ್ರಾರಂಭಿಸಲು ದೇವರು ಕೃಪೆ ತೋರಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482