By Village Missionary Movement
Monday, 01-Nov-2021ದೈನಂದಿನ ಧ್ಯಾನ 01-11-2021
ನನ್ನಂತೆ ಬದಲಾಗಿ
"...ಆತನನ್ನು ನೋಡುವ ಹಾಗೆ ಅವನು ಮುಂದಾಗಿ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿದನು."—
ಲೂಕ 19:4
ಯೆರಿಕೊ ಎಂಬುದು ಒಂದು ಸುಂದರವಾದ ಪಟ್ಟಣ. ಇಸ್ರಾಯೇಲ್ ದೇಶದಲ್ಲಿರುವ ಈ ಪಟ್ಟಣವು ರೋಮಾ ಆಧಿಪತ್ಯದ ಕೆಳಗಿತ್ತು. ಹಳೆಯದಾಗಿದ್ದ ಆ ಪಟ್ಟಣದ ಬೀದಿಯನ್ನು ಅಗಲಗೊಳಿಸಲು, ಮಾರ್ಗಕ್ಕಾಗಿ ಮತ್ತು ಇನ್ನೂ ಕೆಲವು ಅಗತ್ಯಗಳಿಗಾಗಿ ಅಲ್ಲಿರುವ ಮರಗಳನ್ನು ಕಡಿಯಲಾಯಿತು. ಆದರೂ ಇದು ಯಾವುದರಲ್ಲೂ ಸಿಕ್ಕಿಕೊಳ್ಳದೇ ಒಂದೇ ಒಂದು ಆಲದ ಮರವು ಮಾತ್ರ ಹಲವು ವರ್ಷಗಳಿಂದ ನಿಂತಿತ್ತು. ಈಗ ಮುಂದಕ್ಕೆ ಆ ಮರವೇ ಮಾತಾಡುವುದನ್ನು ಕೇಳೋಣವಾ?
ಒಂದು ದಿನ ಆ ಮಾರ್ಗವಾಗಿ ಯೇಸು ಬರುತ್ತಾರೆಂಬ ಸುದ್ದಿ ತುಂಬಾ ಲವಲವಿಕೆಯಿಂದ ಮಾತನಾಡಿಕೊಳ್ಳಲಾಯಿತು. ನಾನಂದುಕೊಂಡೆ, ಇಂದು ಅನೇಕರು ನನ್ನ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂದು! ಆಗ ಒಬ್ಬ ಕುಳ್ಳ ಮನುಷ್ಯನು ಗುಂಪಿನ ಮಧ್ಯದಲ್ಲಿ ಯೇಸುವನ್ನು ನೋಡಲು ಸಾಧ್ಯವಾಗದೆ ತವಕಪಡುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಗುಡು ಗುಡು ಎಂದು ಓಡಿ ಬಂದು ನನ್ನ ಮೇಲೆ ಏರಲು ಪ್ರಯತ್ನಿಸಿದರು. ಅವರು ಅನ್ಯಾಯದ ತೆರಿಗೆ ವಸೂಲಿ ಮಾಡುವವರೆಂದು ನನಗೆ ತಿಳಿದಿತ್ತು. ಆದರೂ ಅವರು ನನ್ನ ಮೇಲೆ ಹತ್ತಲು ಸದ್ದಿಲ್ಲದೆ ಮೌನವಾಗಿ ಬಿಟ್ಟು ಕೊಟ್ಟೆನು. ಯೇಸುವನ್ನು ನೋಡುವಂತೆ ಅವರನ್ನು ಮೇಲೆತ್ತಿ ತೋರಿಸಿದೆನು. ದೊಡ್ಡ ಅದ್ಬುತ ಸಂಭವಿಸಿತು. ಯೇಸು ನನ್ನ ಬಳಿಗೆ ಬಂದ ತಕ್ಷಣ, ಮೇಲಕ್ಕೆ ನೋಡಿ, "ಜಕ್ಕಾಯನೇ, ತ್ವರೆಯಾಗಿ ಇಳಿದು ಬಾ, ನಾನು ಈ ದಿನ ನಿನ್ನ ಮನೆಯಲ್ಲಿ ಇರಬೇಕಾಗಿದೆ" ಎಂದು ಹೇಳಿದರು. ಒಂದು ಪಾಪಿಯಾದ ಮನುಷ್ಯನ ಮನೆಗೆ ಯೇಸು ಹೋಗುತ್ತಿದ್ದಾರೆಯೇ ಎಂದು ಎಲ್ಲರಿಗೂ ಸಿಟ್ಟು! ಆದರೆ ನನಗೋ ತುಂಬಾ ಸಂತೋಷ! ಸ್ವಲ್ಪ ಸಮಯದಲ್ಲೇ ಬಡ ಬಗ್ಗರಾಗಿದ್ದ ಎಲ್ಲಾ ಜನರ ಕೈಗಳಲ್ಲಿ ಹಣ! ಅವರು ಮಾತನಾಡಿಕೊಂಡು ಬರುತ್ತಿರುವುದನ್ನು ನಾನು ಗಮನಿಸಿದೆ. “ಜಕ್ಕಾಯನು ತಾನು ಅನ್ಯಾಯವಾಗಿ ತೆಗೆದುಕೊಂಡದ್ದನ್ನೆಲ್ಲಾ ನಾಲ್ಕರಷ್ಟು ಕೊಡುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಯೇಸು ಅವರನ್ನು ಹೀಗೆ ಬದಲಾಯಿಸಿ ಬಿಟ್ಟರೇ” ಎಂದು ಹೇಳಿಕೊಂಡರು. ನನ್ನ ಸಂತೋಷಕ್ಕೆ ಮಿತಿಯೇ ಇಲ್ಲ!
ಪ್ರಿಯರೇ! ಬಹುಶಃ ಒಂದು ವೇಳೆ ನಿಮಗೆ, ಜಕ್ಕಾಯನ ಹಾಗೆ ಹಣವನ್ನು ಹಿಂತಿರುಗಿಸಿ ಕೊಡಲು ಕಷ್ಟವಾಗಿಯೂ ಅಥವಾ ಅಸಾಧ್ಯವಾಗಿಯೂ ಇರಬಹುದು. ಆದರೆ ನನ್ನಂತೆ ಬದುಕುವುದು ತುಂಬಾ ಸುಲಭ. ನಾನು ಜಕ್ಕಾಯನನ್ನು ನನ್ನ ಮೇಲೆ ಏರಲು ಅನುಮತಿಸಿದಂತೆ ನೀವೂ ಕೂಡ ಪಾಪಿಗಳನ್ನು ಅಂಗೀಕರಿಸಿರಿ. ನಾನು ಅವರನ್ನು ಸ್ವಲ್ಪ ಸಮಯ ಹೊತ್ತುಕೊಂಡಂತೆ ನೀವು ಅವರ ದೌರ್ಬಲ್ಯಗಳನ್ನು ಸಹಿಸಿಕೊಳ್ಳಿರಿ, ನಿಮಗೆ ತಿಳಿದಿರುವುದನ್ನು ಕಲಿಸಿಕೊಡಿರಿ. ಅವರು ಯೇಸುವನ್ನು ತಿಳಿದುಕೊಳ್ಳಲು ಬೇಕಾದ ಎಲ್ಲಾ ಸಹಾಯವನ್ನು ಮಾಡಿರಿ. ನಾನು ಒಂದು ದಿನ ಮಾತ್ರವೇ ಉಪಯೋಗವಾದೆನು. ಆದರೆ ನನ್ನ ಮೇಲೆ ಹತ್ತಿದ ಜಕ್ಕಾಯನ ಬಗ್ಗೆ ಸಾವಿರಾರು ವರ್ಷಗಳಿಂದ ಮಾತನಾಡುತ್ತಲೇ ಇದ್ದಾರೆ. ನೀವು ಮುನ್ನಡೆಸುವ ವ್ಯಕ್ತಿಯೂ ಕೂಡ ಹಾಗೆ ಇರಬಹುದಲ್ಲವೇ! ಇತರರು ಯೇಸು ಕ್ರಿಸ್ತನನ್ನು ತಿಳಿದುಕೊಳ್ಳಲು ನಿಮ್ಮಿಂದ ಸಾಧ್ಯವಾದ ಚಿಕ್ಕ ಚಿಕ್ಕ ಕಾರ್ಯಗಳನ್ನು ಮಾಡಿರಿ. ಖಂಡಿತವಾಗಿಯೂ ಅದು ಅನೇಕರ ಜೀವನವನ್ನು ಆಶೀರ್ವಾದಕರವಾಗಿ ಮಾರ್ಪಡಿಸುತ್ತದೆ. ನಮಗಾಗಿಯೇ ಬದುಕಿ ಸಾಯುವುದರಲ್ಲಿ ಏನು ಸಂತೋಷವಿದೆ? ಮತ್ತೊಬ್ಬರ ಜೀವನ ಮಾರ್ಪಡಲು ಮತ್ತು ಅವರು ಆಶೀರ್ವದಿಸಲ್ಪಡುವ ರೀತಿಯಲ್ಲಿ ಬದುಕುವುದರಲ್ಲೇ ತಾನೇ ನಿಜವಾದ ಸಂತೋಷವಿದೆ!
-K. ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.