By Village Missionary Movement
Saturday, 03-Aug-2024ಧೈನಂದಿನ ಧ್ಯಾನ(Kannada) – 03.08.2024
ದೇವರನ್ನು ಯಾಮಾರಿಸುತ್ತಿದ್ದೇವಾ?
"…ದೇವರಾತ್ಮಾನುಸಾರವಾಗಿ ಪ್ರಾರಂಭಿಸಿ ಈಗ ಬಹಿರಾಚಾರಗಳಿಂದ ಸಿದ್ಧಿಗೆ ಬರಬೇಕೆಂದಿದ್ದೀರಾ?" - ಗಲಾತ್ಯ 3:3
ಕುದುರೆಗಳನ್ನು ಮಾರಾಟ ಮಾಡುವಾಗ ಒಂದು ಪ್ರಮುಖ ವಿಧಾನವನ್ನು ಅನುಸರಿಸಲಾಗುತ್ತದೆ. ಕುದುರೆಗಳನ್ನು ಮಾರಾಟ ಮಾಡುವ ಮೊದಲು ಎರಡು ಅಥವಾ ಮೂರು ದಿನಗಳವರೆಗೆ ಕುಡಿಯಲು ನೀರು ಕೊಡದೆ ಬಾಯಾರಿಕೆಯಾಗಲು ಬಿಟ್ಟು ಬಿಡುತ್ತಾರೆ. ಕುದುರೆಗಳು ತುಂಬಾ ದಾಹದಿಂದ ಇರುತ್ತವೆ. ಖರೀದಿದಾರರ ಮುಂದೆ ನೀರು ತುಂಬಿದ ತೊಟ್ಟಿಗಳು ಇರುತ್ತವೆ. ಆಗ ಆ ಬಾಯಾರಿದ ಕುದುರೆಗಳನ್ನು ಬಿಚ್ಚಿ ಬಿಡುತ್ತಾರೆ. ಬಾಯಾರಿದ ಕುದುರೆಗಳು ನೀರನ್ನು ನೋಡಿದ ಕೂಡಲೇ ಅದರ ಕಡೆಗೆ ವೇಗವಾಗಿ ಓಡುತ್ತವೆ. ಆಗ ಅದನ್ನು ಬೆಳೆಸಿದವರು ಶಿಳ್ಳೆ ಹೊಡೆಯುತ್ತಾರೆ. ನೀರಿನ ಕಡೆಗೆ ಹೋಗುವ ಕುದುರೆಯು ತನ್ನನ್ನು ಬೆಳೆಸಿದವನ ಶಬ್ಧವನ್ನು ಕೇಳಿ ನಿಲ್ಲುತ್ತದೆ ಮತ್ತು ತನ್ನನ್ನು ಬೆಳೆಸಿದ ವ್ಯಕ್ತಿಯ ಕಡೆಗೆ ಹಿಂತಿರುಗುತ್ತದೆ. ತನ್ನ ಬಾಯಾರಿಕೆಯನ್ನು ನಿಗ್ರಹಿಸುವ ಮತ್ತು ತನ್ನ ಯಜಮಾನನ ಮಾತನ್ನು ಪಾಲಿಸುವ ಯಾವುದೇ ಕುದುರೆಯನ್ನು ಅತ್ಯುತ್ತಮ ಕುದುರೆ ಎಂದು ಖರೀದಿಸಲಾಗುತ್ತದೆ. ಆ ಕುದುರೆಯು ಯಜಮಾನನ ವಿಶ್ವಾಸಾರ್ಹ ಕುದುರೆಯಾಗಿ ಮಾರ್ಪಡುತ್ತದೆ.
ಸತ್ಯವೇದದಲ್ಲಿಯೂ ಸಹ ಕನಸು ಕಂಡ ಯೋಸೇಫನು ಅನೇಕ ಕಷ್ಟಗಳು, ಹೋರಾಟಗಳು, ನಿಂದೆಗಳು ಮತ್ತು ಸುಳ್ಳು ಆರೋಪಗಳು ಇದ್ದರೂ ದೇವರು ತನ್ನೊಂದಿಗೆ ಇದ್ದಾರೆ ಎಂಬುದನ್ನು ಗ್ರಹಿಸಿದ್ದರು. ತನ್ನ ಕಾರ್ಯಗಳನ್ನು ಅವರು ನೋಡುತ್ತಲೇ ಇದ್ದಾರೆ ಎಂಬ ಧೈರ್ಯವುಳ್ಳವರಾಗಿ, ಕೃತಜ್ಞತೆಯುಳ್ಳವರಾಗಿ ಇದ್ದುದರಿಂದಲೇ ಪಾಪದ ಶೋಧನೆಯು ಬಂದಾಗ, "ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ?" (ಆದಿಕಾಂಡ 39:9) ಎಂದು ತನ್ನ ಬಟ್ಟೆಗಳನ್ನು ಬಿಟ್ಟು ಓಡಿಹೋದರು. ಅವರು ಪಾಪವನ್ನು ಜಯಿಸಿದರು ಮತ್ತು ದೇವರನ್ನು ಸಂತೋಷಪಡಿಸಿದರು. ನಿರೀಕ್ಷೆಯಿಂದಿದ್ದ ದೇವರು ಯಾಮಾರಲಿಲ್ಲ. ಖಂಡಿತವಾಗಿಯೂ ಸಂತೋಷಪಟ್ಟಿರುತ್ತಾರೆ. ಯೋಸೇಫನನ್ನು ಉನ್ನತ ಸ್ಥಿತಿಗೆ ಹೆಚ್ಚಿಸಿದರು.
ಇದನ್ನು ಓದುತ್ತಿರುವ ಪ್ರೀತಿಯ ಸಹೋದರ! ಸಹೋದರಿ! ಪ್ರತಿದಿನ ಮುಂಜಾನೆಯಲ್ಲಿ ದೇವರು ಒಂದು ನಿರೀಕ್ಷೆಯೊಂದಿಗೆ ಹೊಸ ಕೃಪೆಯಿಂದ ನಮ್ಮನ್ನು ತುಂಬುತ್ತಾರೆ. ಜೀವವನ್ನು ಕೊಟ್ಟು ಬದುಕಿಸುತ್ತಾರೆ. ತನಗಾಗಿ ಕೆಲಸ ಮಾಡಬೇಕೆಂಬುದೇ ಅವರ ನಿರೀಕ್ಷೆ. ಆದರೆ ನಾವು ನಮಗೆ ಇಷ್ಟವಾಗುವ ಕೆಲಸಗಳನ್ನು ಮಾಡುತ್ತಾ ನಮ್ಮನ್ನು ಸಂತೋಷಪಡಿಸಿಕೊಳ್ಳುತ್ತಿದ್ದೇವಾ? ಅಥವಾ ಆತನಿಗೆ ಇಷ್ಟವಾಗುವ ಕೆಲಸಗಳನ್ನು ಮಾಡಿ ಆತನನ್ನು ಸಂತೋಷಪಡಿಸುವವರಾಗಿದ್ದೇವಾ? ಯೋಚಿಸಿ ನೋಡಲು ಆಹ್ವಾನಿಸಲ್ಪಟ್ಟಿದ್ದೇವೆ. ನಾನು ಪ್ರಾರ್ಥಿಸುತ್ತಿದ್ದೇನೆ. ಚೆನ್ನಾಗಿ ಸತ್ಯವೇದ ಓದುತ್ತಿದ್ದೇನೆ ಎಂದು ಕ್ರೈಸ್ತರ ಮೂಲಭೂತ ವಿಷಯಗಳನ್ನು ಮಾಡಿಬಿಟ್ಟು ದೊಡ್ಡ ಸಾಧನೆ ಮಾಡಿಬಿಟ್ಟಂತೆ ಭಾವಿಸುತ್ತೇವೆ. ಚಿಕ್ಕ ಮಕ್ಕಳಂತೆ ನೆಪಗಳನ್ನು ಹೇಳಿ ಸುಮ್ಮನಾಗದೇ ಅವರಿಗಾಗಿ ಮಾತನಾಡಲು ಮತ್ತು ಕಾರ್ಯಮಾಡಲು ದೇವರು ಜನರನ್ನು ಹುಡುಕುತ್ತಿದ್ದಾರೆ. ಇಂದು, ದೇವರು ನಮಗೆ ಕೊಟ್ಟ ಸಮಯವನ್ನು ದೇವರಿಗಾಗಿ ಕಳೆದು, ದೇವರನ್ನು ಸಂತೋಷಪಡಿಸಿದ ಯೋಸೇಫನಂತೆ ಇರಲಿದ್ದೇವಾ? ಅಥವಾ ನಿಷೇಧಿತ ಹಣ್ಣನ್ನು ತಿಂದು ತಪ್ಪು ನಿರ್ಧಾರಗಳನ್ನು ಮಾಡಿದ ಆದಾಮ ಮತ್ತು ಹವ್ವಳಂತೆ ನಾವು ದೇವರನ್ನು ದುಃಖಿಸಲಿದ್ದೇವಾ? ಆಯ್ಕೆ ನಮ್ಮ ಕೈಯಲ್ಲಿದೆ, ನಾವು ಏನು ಮಾಡಲಿದ್ದೇವೆ?
- L. ಅಳಗರಸ್ವಾಮಿ
ಪ್ರಾರ್ಥನಾ ಅಂಶ:
ಈ ಶಿಬಿರದಲ್ಲಿ ಹಾಡಲ್ಪಡುವ ಹಾಡುಗಳು, ಸಾಕ್ಷಿಗಳು ಮತ್ತು ಆರಾಧನೆಯ ಮೂಲಕ ದೇವರು ಯೌವನಸ್ಥರ ಹೃದಯವನ್ನು ಮುಟ್ಟುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482